ತಾರಾನಗರ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ, ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ವಿಜೃಂಭಣೆಯಿಂದ
ಬಳ್ಳಾರಿ / ಸಂಡೂರು:
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಾರಾನಗರದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ಶಾರದಾ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ತಾಲೂಕು ಪಂಚಾಯತಿ ಸದಸ್ಯರಾದ ಲಕ್ಷ್ಮಿ ತಿಮ್ಮಪ್ಪ, ಎಸ್ಡಿಎಂಸಿ ಅಧ್ಯಕ್ಷರಾದ ಎನ್. ಪಾಲಯ್ಯ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹಾದಿಮನಿ, ಸಿಆರ್ಪಿ ಜಗದೀಶ್, ಮುಖ್ಯೋಪಾಧ್ಯಾಯರಾದ ಹೇಮಂತ್ ರಾಜ್ ಕೆ ಸೇರಿದಂತೆ ವೇದಿಕೆಯ ಮೇಲಿನ ಗಣ್ಯರು ಉದ್ಘಾಟಿಸಿದರು.
ಏಳನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅನುಶ್ರೀ ಎಂ.ಎನ್ (ಪ್ರಥಮ), ಕಲ್ಪನಾ (ದ್ವಿತೀಯ), ಕವನ (ತೃತೀಯ) ಹಾಗೂ ಉತ್ತಮ ವಿದ್ಯಾರ್ಥಿ ಸುರೇಶ್ ಬಿ.ಎನ್ ಅವರನ್ನು ನಗದು ಬಹುಮಾನ ಹಾಗೂ ಸ್ಮರಣಿಕೆಯಿಂದ ಸನ್ಮಾನಿಸಲಾಯಿತು. ತಾರಾನಗರದ ಡಾ. ಕೌಲೂರು ಅವರು ಬಹುಮಾನ ವಿತರಿಸಿ, ಮುಂದಿನ ವರ್ಷಗಳಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮಿ ತಿಮ್ಮಪ್ಪ ಅವರು ಶಾಲೆಗೆ ಬ್ಲೂಟೂತ್ ಸ್ಪೀಕರ್ನ್ನು ದೇಣಿಗೆಯಾಗಿ ನೀಡಿದರು. ನಲಿ-ಕಲಿ ವಿದ್ಯಾರ್ಥಿಗಳಿಗಾಗಿ ಒಂದು ವರ್ಷದ ಆಟೋ ವ್ಯವಸ್ಥೆಗೆ ಆರ್ಥಿಕ ಸಹಾಯ ನೀಡಿದ ಕಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಶೈಕ್ಷಣಿಕ ಸಾಲಿನಲ್ಲಿ ಅಕ್ಷರಾಭ್ಯಾಸದಲ್ಲಿ ಉತ್ತಮ ಪ್ರಗತಿ ತೋರಿದ ಪ್ರತಿ ತರಗತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಕೂಡ ಅಭಿನಂದಿಸಲಾಯಿತು.
ಶಿಕ್ಷಕಿ ಡಾ. ಸುಮಿತ್ರ ಎನ್ ವಾರ್ಷಿಕ ವರದಿಯನ್ನು ವಾಚಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹಾದಿಮನಿ ಅವರು ಶಾಲೆಯ ಶೈಕ್ಷಣಿಕ ಪ್ರಗತಿಗೆ ಊರಿನ ಮುಖಂಡರು ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು. ಮುಖ್ಯೋಪಾಧ್ಯಾಯರಾದ ಹೇಮಂತ್ ರಾಜ್ ಕೆ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಮನರಂಜನೆ ನೀಡಿದರು. ಊರಿನ ಮುಖಂಡರಾದ ಮಾರುದ್ರೇಗೌಡ, ದೇವೇಂದ್ರಪ್ಪ, ಆನಂದಪ್ಪ, ವಿಜಯ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :ಮಹಮ್ಮದ್ ಖಾಸಿo
