ಇಳಕಲ್/ಬಾಗಲಕೋಟೆ
ಇಳಕಲ್ ಪಟ್ಟಣದಲ್ಲಿ ಜನಿಸಿ ಪತ್ರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತರು ಹಾಗೂ ಹಾಯ್ ಮಿಂಚು ಪತ್ರಿಕೆಯ ಸಂಪಾದಕರಾದ ಅಮನ್ ಕೊಡಗಲಿ (48) ಅವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 17ರಂದು ಬೆಳಗಿನ ಜಾವ ಸುಮಾರು 8 ಗಂಟೆಗೆ ಇಳಕಲ್ ಪಟ್ಟಣದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.ಅಮನ್ ಕೊಡಗಲಿ ಅವರು ಪತ್ರಿಕಾ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಧೈರ್ಯಶಾಲಿ ವರದಿಗಾರಿಕೆಯಿಂದ ಹೆಸರು ಗಳಿಸಿದ್ದರು. ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿ, ಪತ್ರಕರ್ತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದವರು. ಪತ್ರಕರ್ತರ ಹಕ್ಕುಗಳಿಗಾಗಿ ಹೋರಾಟ ನಡೆಸಿ, ಅವರ ಸಂಕಷ್ಟಗಳಿಗೆ ಕಿವಿಗೊಟ್ಟು ನೆರವಾಗುತ್ತಿದ್ದವರು ಎಂದು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.ಅವರ ಅಗಲಿಕೆ ಪತ್ರಿಕಾ ವಲಯಕ್ಕೆ ಅಪಾರ ನಷ್ಟವಾಗಿದ್ದು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ದುಃಖ ವ್ಯಕ್ತಪಡಿಸಿದ್ದಾರೆ.ಮೃತರು ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ವರದಿ :ಮಹಮ್ಮದ್ ಗೌಸ್
