ವಿಜಯನಗರ (ಹೊಸಪೇಟೆ), ಜಾಗೃತಿ ಬೆಳಕು ನ್ಯೂಸ್
ಕಮಲಾಪುರ ಪಟ್ಟಣದಲ್ಲಿರುವ ನಕಲಿ ವೈದ್ಯರ ಮೇಲೆ ಶನಿವಾರ ದಾಳಿ ನಡೆಸಿದರು.

ವಿಜಯನಗರ ಜಿಲ್ಲಾದ್ಯಂತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಂಕರ್ ನಾಯ್ಕ್ ರವರ ನೇತೃತ್ವದಲ್ಲಿ, ಜಿಲ್ಲಾ ಆಯುಷ್ ಅಧಿಕಾರಿಗಳು ಮತ್ತು ಹೊಸಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳು ಕಮಲಾಪುರದ ಸಫಾ ಕ್ಲಿನಿಕ್ ನ ನಕಲಿ ವೈದ್ಯ ಅಸ್ಲಂ ಬಾಷಾ ಎಂಬ ವ್ಯಕ್ತಿ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಅಧಾರದ ಮೇಲೆ ಜಿಲ್ಲಾ ಆರೋಗ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಸ್ಲಂ ಭಾಷಾ ಮತ್ತು ಅವರಿಗೆ ಆಶ್ರಯ ನೀಡಿದ ವಿಜಯನಗರ ಮೆಡಿಕಲ್ ಮಾಲೀಕರು ಪರಾರಿ ಆಗಿದ್ದಾರೆ.

ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಿದರೂ ಕರೆ ಸ್ವೀಕರಿಸದೇ ನಿರಾಕರಿಸಿದ್ದಾರೆ. ಕೂಡಲೇ ಸಫಾ ಕ್ಲಿನಿಕ್ ಅನ್ನು ಕೆಪಿಎಂಇ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕಮಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ಬಂದ್ ಮಾಡಿ ಬೀಗ ಹಾಕಲಾಗಿದೆ.

ಇದೇ ವೇಳೆ ಶ್ರೀ ಪದ್ಮ ಕ್ಲಿನಿಕ್ ನಡೆಸುತ್ತಿರುವ ಡಾ. ಸುಹಾಸ್ ಅವರು ಕೆಪಿಎಂಇ ನೊಂದಾಣಿ ಆಗದೇ ಹೋಮಿಯೋಪತಿ ವೈದ್ಯ ಪದ್ಧತಿಗೆ ಪರವಾನಗಿ ಪಡೆದು ಅಲೋಪಥಿ ಸೇವೆ ನೀಡುತ್ತಿರುವ ಹಿನ್ನಲೆಯಲ್ಲಿ ಇವರಿಗೆ ನೋಟೀಸ್ ಜಾರಿ ಮಾಡಲಾಗಿದೆ.ಪಟ್ಟಣದ ಇನ್ನೊಂದು ಸುಧಾ ಕ್ಲಿನಿಕ್ ಭೇಟಿ ನೀಡಿದಾಗ ಡಾ.ಮನೋಹರ್ ರವರ ಬಯೋಮೆಡಿಕಲ್ ವೇಸ್ಟ್ ಸರಿಯಾಗಿ ನಿರ್ವಹಿಸದೇ ಇರುವ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಂಕರ ನಾಯ್ಕ ತಿಳಿಸಿದ್ದಾರೆ.
ವರದಿ:-ಮಹಮ್ಮದ್ ಗೌಸ್
