ವಿಜಯನಗರ/ಹೊಸಪೇಟೆ, ಜಾಗೃತಿ ಬೆಳಕು ನ್ಯೂಸ್
ಮಾ, 4.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಮಾಜ ಸೇವಕ ಎಚ್ ಜೆ ವಿರೂಪಾಕ್ಷ l ನೇತೃತ್ವದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ನಗರದ ಕ್ರೀಡಾಂಗಣದಲ್ಲಿ ಹೋಳಿ ಹಬ್ಬಕ್ಕೆ ಸಾವಿರಾರು ಜನರು ಭಾಗವಹಿಸಿ ಬಣ್ಣಗಳ ಹಬ್ಬವನ್ನು ಉತ್ಸಾಹಭರಿತವಾಗ ಆಚರಿಸಿದರು ಹಬ್ಬದ ಅಂಗವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ವಿಶೇಷ ನೀರಿನ ವ್ಯವಸ್ಥೆ ಕಲ್ಪಿಸಿ, ಮೇಲ್ಮೈಯಿಂದ ವಿವಿಧ ಮಾದರಿಯಲ್ಲಿ ನೀರನ್ನು ಸಿಂಪಡಿಸುವ ಮೂಲಕ ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬಿದರು.ಮಕ್ಕಳು ಹಾಗೂ ಯುವಕರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿ ಹಬ್ಬದ ಉಲ್ಲಾಸವನ್ನು ದ್ವಿಗುಣಗೊಳಿಸಿದರು.

ಶಾಸಕರಾದ ಎಚ್.ಆರ್. ಗವಿಯಪ್ಪ ಅವರ ಹಿರಿಯ ಪುತ್ರರಾದ ಎಚ್ ಜಿ ಗುರುದತ್ ಹಾಗೂ ಎಚ್ ಜಿ ವಿರೂಪಾಕ್ಷ ಅವರ ನೇತೃತ್ವದಲ್ಲಿ, “ರಾಹುಲ್ ಡಿಟು” ಅವರ ಸಂಯೋಜನೆಯೊಂದಿಗೆ ವೇದಿಕೆಯ ಕಾರ್ಯಕ್ರಮಗಳು ನಡೆದವು.

ಡಿಜೆ ಸಂಗೀತದ ನಡುವೆ ಸರ್ವಧರ್ಮೀಯರು ಒಗ್ಗಟ್ಟಿನಿಂದ ಭಾಗವಹಿಸಿದ್ದು, ಹೋಳಿ ಹಬ್ಬದ ಮೂಲಭೂತ ಆತ್ಮವಾದ ಸೌಹಾರ್ದತೆ ಮತ್ತು ಸಹಬಾಳ್ವೆ ಸ್ಪಷ್ಟವಾಗಿ ಮೂಡಿಬಂದಿತು.ಹಬ್ಬದ ಸಂದರ್ಭದಲ್ಲಿಯೇ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಯಿತು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಎಸ್ಪಿ ಜಾಹ್ನವಿ ಎಸ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಹಬ್ಬವನ್ನು ಯಶಸ್ವಿಯಾಗಿ ನಡೆಸಲಾಯಿತು.

ಹಬ್ಬದ ಕಾರ್ಯಕ್ರಮದ ವ್ಯವಸ್ಥೆ, ಶಿಸ್ತಿನ ಪಾಲನೆ ಹಾಗೂ ಸಾರ್ವಜನಿಕರ ಅನುಕೂಲತೆಗಾಗಿ ಕೈಗೊಂಡ ಕ್ರಮಗಳನ್ನು ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರ ಕುಟುಂಬದ ಸರಳ ನಡೆ-ನುಡಿ ಹಾಗೂ ಸಂಘಟನೆಯ ಶ್ರದ್ಧಾ ಕಾರ್ಯಕ್ಕೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹೋಳಿ ಸಂಭ್ರಮ ಬಣ್ಣಗಳ ಜೊತೆಗೂಡಿ ಸಹೋದರತ್ವದ ಸಂದೇಶ ಸಾರಿದ ವಿಶಿಷ್ಟ ಉತ್ಸವವಾಗಿ ಉಳಿಯಿತು.
ವರದಿ :ಮಹಮ್ಮದ್ ಗೌಸ್
